ಬೇಗ ಎದ್ದು ನಿತ್ಯ ಕರ್ಮ ಸ್ನಾನಾದಿಗಳನ್ನು ಮುಗಿಸಿ ದೇವಿಯ ಪಾರಾಯಣವನ್ನು ತಪ್ಪದೇ ಮಾಡುತ್ತಿದ್ದರು. ಇವರು ದೇವಿಯ ಪಾರಾಯಣ ಮಾಡುತ್ತಾ ಮಾಡುತ್ತಾ ಇರುವಾಗಲೇ ಇವರಿಗೆ ಅಮ್ಮನ ಬಗ್ಗೆ ಬಹಳಷ್ಟು ಬಲವಾದ ನಂಬಿಕೆ ಹಾಗೂ ಆಸಕ್ತಿ ಮೂಡ ತೊಡಗಿತು. ಕೊನೆಗೆ ಇವರು ಹಾಲುಮತದ ಸಮಾಜದ ಶ್ರೀ ಶ್ರೀ ಶ್ರೀಅವಧೂತರಿಂದ ದೀಕ್ಷೆಯನ್ನು ಪಡೆದುಕೊಂಡರು. ದೀಕ್ಷಾ ಕಾರ್ಯಕ್ರಮವು 1981ನೆಯ ಇಸುವಿಯಲ್ಲಿ ನೆರವೇರಿತು. ಇಲ್ಲಿಂದಲೇ ಬ್ರಹ್ಮಜ್ಞಾನವಾಯಿತೆಂದು ಹೇಳುತ್ತಾರೆ. ಹೀಗೆಯೇ ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾ ನೆನಪಿನ ಬುತ್ತಿಯನ್ನು ಬಿಚ್ಚಿ ಉಣಬಡಿಸುತ್ತಾರೆ.
ಗುಂಡಕರ್ಜಿಗಿಗೆ ಶ್ರಾವಣ ಮಾಸದ ನಿಮಿತ್ಯ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಸುಮಾರು 45 ವರ್ಷಗಳ ಹಿಂದೆ ತಮ್ಮ ತಂಡದೊಂದಿಗೆ ಭಜನಾ ಪದಗಳನ್ನು ಹಾಡಲು ಹೋದಾಗ ಶ್ರೀ ಬಸಯ್ಯ ಮುತ್ಯಾರ ಸಮ್ಮುಖದಲ್ಲಿ ಬಜನಾಪದದ ತತ್ವಗಳನ್ನು ನಿಜಗುಣರ ಪದಗಳನ್ನು ಅರ್ಥ ಸಹಿತ ಬಿಡಿಸಿ ಹೇಳಿದಂತವರು ಶ್ರೀಶರಣ ಬಸಪ್ಪನವರು.
ಪೂಜೆ, ಶಿವನಾಮ108 ನಾಮಾವಳಿ, ದೇವಿಯ 108 ನಾಮಾವಳಿ, (ನಿಜಗುಣರ ಕೈವಲ್ಯದಲ್ಲಿ ಬರುವಂತಹವು) ಪಂಚಾಕ್ಷರಿ, ಷಡಕ್ಷರಿ, ಮಂತ್ರಗಳನ್ನು ಹಾಡಿದಾಗ ಶರಣರು ಭಾವುಕರಾಗಿ ಬಸಪ್ಪನವರನ್ನು ಕರೆದು ಹರುಷದಿಂದ, ಆನಂದದಿಂದ ಬಿಗಿದಪ್ಪಿಕೊಂಡು ತಮ್ಮ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಿದ್ದರು. ಇದರಿಂದ ಬಸಪ್ಪನವರಿಗೆ ಬಹಳಷ್ಟು ಖುಷಿಯಾಗಿತ್ತು ಎಂದು ಹೇಳಿಕೊಳ್ಳುತ್ತಾರೆ.
ಬಿ ಬಿ ಇಂಗಳಗಿ ಬಡೇಸಾಬರ ಗದ್ದಿಗೆ ಹತ್ತಿರ ಬಜನಾ ಪದಗಳು ಹಾಡುವಾಗ ಪದದ ಸಾಲುಗಳ ಏನಾದರೂ ನೆನಪು ಹಾರಿದರೆ ಅವರ ಗದ್ದಿಗೆ ಕಿವಿಗೊಟ್ಟು ಕೇಳಿದರೆ ಮರೆತು ಹೋದ ಆ ಪದದ ಸಾಲುಗಳು ಮರಳಿ ನೆನಪಿಗೆ ಬರುವುದೆಂದು ಆ ಶರಣರ ಗದ್ದುಗೆಯಲ್ಲಿ ಅಂತಹ ಅದ್ಭುತ ಶಕ್ತಿ ಅಡಗಿದೆ ಎಂದು ಹೇಳುತ್ತಾರೆ. ಶರಣ ಬಡೇಸಾಬರು ಕಡ್ಲಿಮಟ್ಟಿಯ ಕಾಶೀಬಾಯಿ ಶ್ರವಣಕುಮಾರ ಇವರು ಪದಗಳನ್ನು ಹಾಡುತ್ತಿದ್ದರು.
" ಗಂಡ ಹೆಂಡೀರು ಇಬ್ಬರು ಕೂಡಿ
ಮಾಡುತ್ತಿದ್ದರು ಸಂಸಾರ...
ಅವರ ಹೊಟ್ಟೆಯಲ್ಲಿ ಮಕ್ಕಳಿದ್ದಿಲ್ಲ
ಮಗಳು ಹುಟ್ಯಾಳ ಮಹಾಸುಂದರ "