ಮನದ ಕಡಲು ಚಿತ್ರದಲ್ಲಿನ ಕಲಾವಿದರ ಆಯ್ಕೆ,ಚಿತ್ರೀಕರಣ, ಬಿಡುಗಡೆಯ ಸಂದರ್ಭ,ಪ್ರಮೋಷನ್ ವಿಚಾರ ಹೀಗೆ ತುಂಬಾ ಕಡೆ ಯೋಗರಾಜ್ ಭಟ್ರ ಜತೆಗೆ ಫೇಮಸ್ ಆಗಿದ್ದ ಮತ್ತೊಂದು ಮಹಾ ಪ್ರಚಂಡ ಹೆಸರು ಅದು ನಾಯಕ ನಟ ಸುಮುಖ.
ತುಂಬಾ ಸುರಸುಂದರಾಂಗ ಹುಡುಗ,ಹುಡುಗಿಯರು ಒಮ್ಮೆ ಈತನನ್ನು ನೋಡಿದರೆ ಏನ್ ಹ್ಯಾಂಡ್ಸಮ್ ಗುರು ಅನ್ನೋದನ್ನು ನಾವೇ ಎಷ್ಟೋ ನೋಡಿದ್ದೀವಿ,ಇಂತಹ ಹುಡ್ಗ ಹೀರೋ ಯಾವ ಚಿತ್ರ ಮಾಡ್ತಾ ಇದಾನೆ ಅಂತಾ ಚರ್ಚೆ ಮಾಡುತ್ತಿದ್ದ ಸಮಯ, ಒಂದು ವಿಶೇಷ ಸುದ್ದಿಯೊಂದು ಬಂದಿದೆ,ಕೇಳಿ..
ಗಣಪತಿ ಬಪ್ಪ ಮೋರಿಯಾ’ ಚಿತ್ರದ ಟೈಟಲ್, ಫಸ್ಟ್ ಲುಕ್ ಪೋಸ್ಟರ್ ಅನಾವರಣ
ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಕಥೆಗಳ ಅಲೆ ಜೋರಾಗಿದ್ದು, ಇದೀಗ ಮತ್ತೊಂದು ವಿಭಿನ್ನ ಹಾಗೂ ಭರವಸೆಯ ಹೊಸ ಚಿತ್ರ ಸೆಟ್ಟೇರಿದೆ. ಚಿತ್ರಕ್ಕೆ ‘ಗಣಪತಿ ಬಪ್ಪ ಮೋರಿಯಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಟೈಟಲ್ ಜೊತೆಗೆ ಆಕರ್ಷಕ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.
ಸಂಪೂರ್ಣ ಹೊಸತನದಿಂದ ಕೂಡಿರುವ ಪೋಸ್ಟರ್ ಸದ್ಯ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಈ ಚಿತ್ರವು ಪೊಲಿಟಿಕಲ್ ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬರಲಿದೆ. ಕಥೆಯ ಗಟ್ಟಿತನಕ್ಕಾಗಿ ಚಿತ್ರತಂಡ ಬರೋಬ್ಬರಿ ಒಂದೂವರೆಯಿಂದ ಎರಡು ವರ್ಷಗಳ ಕಾಲ ಪ್ರಿ-ಪ್ರೊಡಕ್ಷನ್ ನಡೆಸಿದೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಎರಡನೇ ಹಂತದ ಶೂಟಿಂಗ್ ಭರದಿಂದ ಸಾಗಲಿದೆ.
ಚಿತ್ರದಲ್ಲಿ ಭರವಸೆಯ ಯುವ ತಾರಾಗಣವಿದ್ದು, ‘ಮನದ ಕಡಲು’ ಸುಮುಖ, ‘ಟಾಮ್ ಅಂಡ್ ಜೆರಿ’ ಖ್ಯಾತಿಯ ನಿಶ್ಚಿತ್ ಕರೋಡಿ, ‘ಬಿಂಗೋ’ ಚಿತ್ರದ ಚಂದನ್ ಆರ್.ಕೆ ಹಾಗೂ ‘ಕಾಮಿಡಿ ಕಿಲಾಡಿಗಳು’ ಸೂರಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ತೆಲುಗು ನಟಿ ಬಾಂಧವಿ ಶ್ರೀಧರ್ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಆಡಿಷನ್ ಮೂಲಕ ರಾಜ್ಯಾದ್ಯಂತ ಆಯ್ಕೆಯಾದ ಹಲವು ಹೊಸ ಪ್ರತಿಭೆಗಳಿಗೂ ಚಿತ್ರದಲ್ಲಿ ಅವಕಾಶ ನೀಡಲಾಗಿದೆ.
ಚಿತ್ರಕ್ಕೆ ಬಲಿಷ್ಠ ತಾಂತ್ರಿಕ ತಂಡದ ಸಾಥ್ ಸಿಕ್ಕಿದ್ದು, ಹೊಸ ಪ್ರತಿಭೆ ಸಂಜಯ್ ಕೆ. ಕೆ. ಅವರು ಕಥೆ, ಚಿತ್ರಕಥೆ ಬರೆದು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಿವಣ್ಣ ಅಭಿನಯದ ‘ಘೋಸ್ಟ್’ ಚಿತ್ರಕ್ಕೆ ಸಂಭಾಷಣೆ ಬರೆದು ಸೈ ಎನಿಸಿಕೊಂಡಿದ್ದ ಪ್ರಸನ್ನ ಈ ಚಿತ್ರಕ್ಕೂ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದು,

‘ಮರ್ಫಿ’ ಖ್ಯಾತಿಯ ಆನಂದ್ ಮೀನಾಕ್ಷಿ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ‘ಕಾಟೇರ’ ಖ್ಯಾತಿಯ ಗುಣ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರೆ, ಮಹೇಶ್ ತೊಗಟ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರವನ್ನು ‘ರಾಯಲ್ ಫ್ಲೈ ಎಂಟರ್ಟೈನ್ಮೆಂಟ್ಸ್’ (Royal Fly Entertainments) ಬ್ಯಾನರ್ ಅಡಿಯಲ್ಲಿ ಲಾರೆನ್ಸ್ ಜೋಸೆಫ್ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

