ಗ್ರಾಮ ಪಟ್ಟಣಗಳಲ್ಲಿ ನಡೆಯುವ ಜಾಗರಣೆ ಭಜನೆ, ಉತ್ಸವಗಳಲ್ಲಿ ಆಮಂತ್ರಿತರಾಗಿ ಹೋಗಿ ತಾವು ಹಾಡಿ ಬೇರೆ ಮೇಳಗಳ ಹಾಡುಗಳನ್ನು ಆಲಿಸಿ ಮೇಲುಕುತ್ತ ಬೆಳೆದವರು ಹುಳಿ ಮುಟ್ಟದ ಲಿಂಗವಾಗಿ ಬೆಳೆದವರು.
ನಿಜಗುಣ ಶಿವಯೋಗಿ, ಸರ್ಪಭೂಷಣ ಶಿವಯೋಗಿ, ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫ ಹಾಗೂ ಮುಂತಾದವರ ತತ್ವಪದಗಳನ್ನು ಸಂದರ್ಭದಲ್ಲಿ ತಕ್ಕಂತೆ ಸಂಯೋಜಿಸಿ ವಾದಿ ಪ್ರತಿವಾದಿ ರೂಪದಲ್ಲಿ ಅದನ್ನು ಪ್ರಸ್ತುತಪಡಿಸಿದವರು.
ಬಸಪ್ಪ ಶರಣರ ಜೀವನ ಸಾಧನೆಗಳನ್ನು ಅಧ್ಯಾಪಕರಾದಂತಹ ಹೆಚ್ ಆರ್ ಬಾಗವಾನರವರು ಈ ಕೃತಿಯಲ್ಲಿ ಅಂದವಾಗಿ ಪ್ರಸ್ತುತಪಡಿಸಿದ್ದಾರೆ. ಭಾಗ-1 ಅವರ ಜೀವನ ಚರಿತ್ರೆಗೆ ಮೀಸಲಾಗಿದೆ. ಈ ಕೃತಿಯ ವಿಶೇಷತೆ ಇರುವುದು ಭಾಗ-2ರಲ್ಲಿ ಮುಂದೆ ವಾದಿ ಸಂವಾದಿ ಸಂಗತಿಗಳು ಬಸಪ್ಪ ಶರಣರು ಹೇಳಿದಂತೆ ದಾಖಲಾಗಿವೆ. ಈ ಘಟನೆಯಲ್ಲಿನ ತಾಜಾತನ ಕರಡು ರೂಪ ಅನುಭಾವದ ದೇಸಿ ನುಡಿಗಳು ಅನನ್ಯವಾಗಿವೆ.
ಇಲ್ಲಿನ ಘಟನೆಗಳಲ್ಲಿ ಭಾರತದ ಹಳ್ಳಿಗಳ ಜೀವಂತಿಕೆ ಒರಟುತನ, ಅನುಭವದ ಹಸಿ ಹಸಿ ಚಿತ್ರ ತತ್ವಪದಗಳ ವಿಶೇಷತೆ, ವರ್ಗ ವರ್ಣ ಸಮಸ್ಯೆ , ಜಾತಿ ಸಮಸ್ಯೆ , ಮೇಲು ಕೇಳು ಸ್ಪರ್ಧೆ, ಮತ್ಸರ, ದಬ್ಬಾಳಿಕೆ ಹೀಗೆ ಹಲವಾರು ಸಂಗತಿಗಳು ಗರಿಬಿಚ್ಚಿಕೊಂಡಿವೆ.
ಬಸಪ್ಪ ಶರಣರ ಜೀವನವನ್ನು ಕಣ್ಣಾರೆ ಕಂಡವರು ದೂರದಿಂದಲೇ ಅವರ ವ್ಯಕ್ತಿತ್ವಕ್ಕೆ ಮಾರು ಹೋದವರು ಸಹೋದರ ಬಂಧುಗಳು ತಾವು ಕಂಡುಂಡ ಅನುಭವಗಳನ್ನು ಒಳಗೊಂಡ ಭಾಗ -3 ರಲ್ಲಿ ಅವರ ವ್ಯಕ್ತಿತ್ವದ ಆಯಾಮಗಳನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ.
ದಲಿತ ಮನೆತನದಲ್ಲಿ ಹುಟ್ಟಿ ಕೇವಲ 3-4ನೇ ತರಗತಿಯವರಗೆ ಕಲಿತು ಕಾಯಕ ತತ್ವದಿಂದ ಲೌಕಿಕ ಬದುಕನ್ನು ಹದಗೊಳಿಸಿಕೊಂಡು ಅನುಭೂತಿ ಪಡೆಯುವಂತ ಶರಣ ಮತ್ತು ತಮ್ಮ ಅನುಭವವನ್ನು ತತ್ವಪದಗಳ ಮೂಲಕ ಲೋಕದ ಲೋಕಕ್ಕೆ ಹಂಚಿದುದು ಸಾಮಾನ್ಯ ಸಂಗತಿಯಲ್ಲ.
ಬಸಪ್ಪ ಶರಣರು ತಮಗೆ ಮಾಸಾಸನ ಮಂಜೂರು ಮಾಡಿಕೊಳ್ಳುವಾಗ ತಮಗೆ ದೊರೆತ ಮೂಲ ಪ್ರಶಸ್ತಿ ಪತ್ರಗಳನ್ನೇ ಕಳುಹಿಸಿದ್ದ ಮುಗ್ಧರು ಈಗ ಅವರಲ್ಲಿ ಯಾವುದೇ ದಾಖಲೆಗಳು ಉಳಿದಿಲ್ಲ.
ಲೇಖಕರಾದ ಹೆಚ್ ಆರ್ ಬಾಗವಾನ ಅವರು ತೆರೆಮರೆಯ ಕಲಾವಿದನಿಗಾಗಿ ಸಮಾರಂಭ ಏರ್ಪಡಿಸಿ ಅವರ ಕಲೆಯನ್ನು ಪ್ರದರ್ಶಿಸಿ ಅತ್ಯಂತ ಗೌರವದಿಂದ ಸನ್ಮಾನಿಸಿ ಅಷ್ಟಕ್ಕೆ ಸುಮ್ಮನಾಗದೆ ಅವರ ಅನುಭಾವ ಗಾಥೆಗಳನ್ನು ತಿಳಿದುಕೊಳ್ಳಲು ತಿಂಗಳುಗಟ್ಟಲೆ ಅವರ ಮನೆಗೆ ಅಲಿದಾಡಿ ವಿಷಯ ಸಂಗ್ರಹಿಸಿ ಸಂಯೋಜಿಸಿ ಅದನ್ನು ಗ್ರಂಥ ರೂಪದಲ್ಲಿ ಲೋಕಾರ್ಪಣೆ ಗೊಳಿಸಲು ಯಶಸ್ವಿಯಾಗಿದ್ದಾರೆ.
ಪ್ರೊ.ಚಂದ್ರೇಗೌಡ ಕುಲಕರ್ಣಿ ಸಾಹಿತಿಗಳು ತಾಳಿಕೋಟೆ

