ಯಾಳವಾರ ಕಡಕೋಳ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಒಬ್ಬರು ತೀರಿಕೊಂಡಿದ್ದರು. ಅಲ್ಲಿಗೆ ತಮದಡ್ಡಿಯ ಭಜನಾ ಸಂಘದವರು ಭಜನಾ ಮಾಡಕ್ ಅಂತ ಬಂದಿದ್ದರು. ನಾವು ಹಳ್ಳೂರಿನಿಂದ ನಮ್ಮ ಬಜನಾ ತಂಡ ತಗೊಂಡು ಹೋದೆವು. ನಮ್ಮನ್ನು ಪರಿಚಯ ಮಾಡಿ ಪದ ಹಾಡಕ್ ಹಚ್ಚಿದರು. ನಾನು ಪದ ಹಾಡಕ್ಕೆ ಶುರು ಮಾಡಿದೆ ಪದ ಹಾಡಿ ಹಾಡಿ ಅದನ್ನು ಬಿಡಿಸಿ ಬಿಡಿಸಿ ಹೇಳಕ್ಕೂ ಹತ್ತಿದೆ ..
ತಮದಡ್ಡಿಯವರ ಮ್ಯಾಲೆ ಯಾಳವಾರದವರ ಪ್ರೇಮ ಬಹಳ. ಆದರೆ ತಮದಡ್ಡಿ ಮತ್ತು ಯಾಳವಾರದವರು ಸಂಬಂಧದಿಂದ ಬೀಗರು ಬೀಗರು. ಮತ್ತು ನಾ ಪದ ಹಾಡ ಬಿಡಿಸಿ ಹೇಳಾಕ್ಕ ಹತ್ತಿಂದ ಪೇಟಿ ಬಾರಿಸುವುದು ಹಿಂದ ಹಾಡೋದು ಅಷ್ಟೇ ಮಾಡಿದ್ದರು. ಅದಕ್ಕೆ ಅವರು ಏನು ತಿಳ್ಕೊಂಡ್ರು ಅಂದ್ರೆ ಹಳ್ಳೂರು ಶರಣ ತಮದಡ್ಡಿ ಹಣಮಂತನ ಗಪ್ಪ ಮಾಡಿ ಬಿಟ್ಟಾನ . ಏನೇನೋ ಹಾಡಕ್ಕೂ ಬರಲ್ಲ ಮಾತಾಡಕ್ಕೂ ಬರಲ್ಲ ಅಂತ ಹೋಗಿ ಯಾಳವಾರದವರಿಗೆ ಹೇಳಿಯಾರು.
“ಇವರು ಮತ್ತು ಯಲ್ಲಪ್ಪ ಮಹಾರಾಜರು ಯಾಳವಾರದಲ್ಲಿ ಬೆಳೆದವರು. ಇದು ಹುಲಿಮನಿ ಜಾಗ. ದೋಣಿ ದಂಡೆಗೆ ಬಂದು ಯಾರೂ ಬೆಳೆಲಾಕ್ ಮೇಳ ಇಲ್ಲಂತ ಅಂತ ಮಾತಾಡ್ಯಾರ.. ಅವಾ ಹಳ್ಳುರಾಂವ ಇಲ್ಲಿ ಬಂದು ಬೆಳೆದು ಹೋದ್ನಾ…? ನೋಡಿ ಬಿಡಬೇಕು ಅಂತ ಕಾಯಕ್ ಹಚ್ಚಿದ್ರು, ಮುಂದ ಕಡ್ಕೊಳದವರು ತಂದಿ ಆರಾಧನೆಗೆ ನನಗೆ ಕಾಯಿ ಕಳಿಸಿದ್ರು. ನಾನು ಅಲ್ಲಿಗೆ ಹೋದೆನ್ರಿ . ಹಳ್ಳೂರು ಶರಣ ಅಲ್ಲಿಗೆ ಬಂದಾನ ಅನ್ನೋದು ಅವರಿಗೂ ಗೊತ್ತಿತ್ತು. ನಾನು ಸಹಜ ಹೋದವ. ಇಡೀ ಕಡಕೋಳ ಮಂದೀನೂ ನನ್ನ ಮೇಲೆ ಬಹಳ ಪ್ರೇಮ. ಅಲ್ಲಿ ಏಳು ಎಂಟು ಭಜನಾ ತಂಡದವರನ್ನು ಕೂಡಿಸಿದ್ದರು. ಅವರು ಹಾಡಾಕ್ಕ ಕಳಿಸುವುದಾದರೆ ಹಳ್ಳೂರ ಶರಣನನ್ನೇ ಕಳಿಸಬೇಕು ಅಂದ್ರು. ಇನ್ನು ಏನು ಮಾಡೋದು? ನಾನು ಹೋದೆ. ನನಗೆ ನೋಡಲು ಬರ್ತಾರ ಅನ್ನೋದು ನನಗ ಗೊತ್ತಿದ್ದಿಲ್ಲ. ಯಾವುದು ಏನೂ ನನಗಗೊತ್ತಿಲ್ಲ”.
“ನಾ ಸಹಜ ಹಾಡಾವಾ ಹಾಡಿದಿನ್ರಿ. ಅವರು ಬ್ಯಾರೆ ತಿಳ್ಕೊಂಡಾರ ಅಷ್ಟು ಹೊತ್ತು ನನ್ನ ಮುಂದೆ ಒಂದು ಇಪ್ಪತ್ತು ಆಳು ಬಂದು ಬಿಟ್ಟು ಕುಳಿತುಕೊಂಡರು. ನನಗೇನು ಮಾಡೋದು ? ಇದು ಸಪ್ಪಂಡಿಯವರ ಪದ ಇದನ್ನು ಹಾಡಕ್ ಶುರು ಮಾಡಿದೆ. “
"ತನ್ನ ತಾ ನರಿದೊಡೆ ಮುಕ್ತ ತಾನೆ
ತನ್ನರಿಯದಿರ್ದೊಡೆ ಹೇಗೆ ವಿರಕ್ತ
ಮೂರು ಮಲಂಗಳ ತೊಳೆದು ಮೂವ
ತ್ತಾರು ತತ್ವಂಗಳ ಮರ್ಮವ ತಿಳಿದು
ಮೂವತ್ತೈದು ಮಧುಗಳ ಕಳೆದು ಪೂರ್ಣ
ತಾರಕ ಬ್ರಹ್ಮದ ಪ್ರಭೇಯೊಳು ಸುಳಿದು
ಆರು ಬಾಗಿಲು ಮುಚ್ಚಿ ನೆನೆದು ಮುಂದೆ
ಮೂರು ದಾರಿಯ ದಾಂಟಿ ದಾರಿಯ ಹಿಡಿದು
ಬೋರೆಂಬ ಸರ್ಪ ತಡೆದು ಮೇಲ
ಕ್ಕೇರಿ ಸುಷುಮ್ನೆಯ ಸುಧೆಯನು ಕುಡಿದು "
ಈ ಪದ ಆಡ್ಕೊಂತ ಹಂಗ ಬಿಡಿಸಿ ಹೇಳಿಕೊಂತು ಹೊರಟೆ. ಅವರು ಪ್ರಶ್ನೆ ಮಾಡಕ್ ಹತ್ತಿದ್ರು, ಯಾವುದರಾಗ ರ ನನ್ನ ಹಿಡಿಯಬೇಕು ಅಂತ ನನ್ನ ಮ್ಯಾಗ ಮ್ಯಾಗ ಪ್ರಶ್ನೆ ಮಾಡಕ್ ಹತ್ತಿದ್ರು. ಅವರು ಹಿಂಗ್ಯಾಕ್ ಮಾಡ್ತಾರ ಅನ್ನೋದು ನನಗೂ ತಿಳಿಯಲಿಲ್ಲ. ಅವರು ಹೆಂಗೆ ಪ್ರಶ್ನೆ ಮಾಡುತ್ತಾರ ನಾನು ಹಂಗೆ ಉತ್ತರ ಹೇಳ್ಕೊಂಡು ಹೋದೆ. ಅವರಿಗೆ ನನ್ನ ಬಗ್ಗೆ ಮಾತನಾಡಕ್ಕೆ ಮುಂದ ಸಂದ ಸಿಗಲಿಲ್ಲ.
ನಾ ಬೆಳಕು ಹರಿಯುತನಕ ಹಾಡಿದೆ. ಅವರು ಬೆಳಗಾನ ಪ್ರಶ್ನೆ ಮಾಡಿದರು. ಅಲ್ಲಿ ಮಂದಿನೂ ಹಂಗ ಕೂಡಿ ಸಾಲಾಗಿ ಕುಂತುಬಿಟ್ಟಿತ್ತು. ಅವರಿಗೆ ಹೊತ್ತು ಹೊಂಟರು ಅವರಿಗೆ ಏನೂಮಾತಾಡಕ್ಕೆ ಸಾಧ್ಯ ಆಗಲಿಲ್ಲ. ಅಲ್ಲಿಂದ ಎದ್ದು ಹೋಗುವಾಗ ಇಂವಾ ಅಟಾಪ ಇಲ್ಲದ ಶರಣ. ಇವಂಗ ನಮ್ಮೂರಿಗೆ ಕರೆಸೋಣ ಅಂದುಕೊಂಡು ಹೋದರು.
ಮುಂದುವರೆಯುತ್ತದೆ ….
ನಾಳೆ ಯಾಳವಾರಕ್ಕೆ ಹೋದಾಗಿನ ಘಟನೆ ಬಗ್ಗೆ ಅರಿಯೋಣ.

