ಸಾಹಸ ಸಿಂಹ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ ರವರ ಯಜಮಾನ ಚಿತ್ರವನ್ನ ಪ್ರೀತಿ ಮತ್ತು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದೇನೆ,
ಬಹುಶಹ ಅದು ವಿಜಯಪುರ ಜಿಲ್ಲೆಯಲ್ಲಿರುವ ಲಕ್ಷ್ಮಿ ಥಿಯೇಟರ್, ಆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಸೆಲೆಬ್ರೇಶನ್ ನಲ್ಲಿದ್ದ ಯಜಮಾನ ಚಿತ್ರವನ್ನ ನಾನು ನೋಡಿದ್ದು ನನ್ನ ಅಜ್ಜಿ ಮತ್ತು ತಾಯಿಯವರ ಜೊತೆಗೆ, ಸುಮಾರು 25ಕ್ಕೂ ಹೆಚ್ಚು ವರ್ಷಗಳ ಹಿಂದೆ ನೋಡಿದ ಯಜಮಾನ ಚಿತ್ರ, ಇವತ್ತಿಗೂ ಒಂದು ಮಧುರವಾದ ಫ್ರೆಶ್ ಫೀಲನ್ನೇ ಕೊಡುತ್ತದೆ, ಇಂಥದ್ದೊಂದು ಅದ್ಭುತ ಚಿತ್ರವನ್ನ ಕನ್ನಡಕ್ಕೆ ಕೊಟ್ಟ ನಿರ್ಮಾಪಕ ರೆಹಮಾನ್ ಸಾಹೇಬರಿಗೊಂದು ನಮಸ್ಕಾರ,
ಯಜಮಾನ ಚಿತ್ರ ಬಂದ ನಂತರ ರೆಹಮಾನ್ ಅವರನ್ನು ಎಲ್ಲರೂ ಯಜಮಾನ ರೆಹಮಾನ್ ಎಂದೇ ಕರೆಯಲು ಶುರು ಮಾಡಿದರು ಅದು ಅವರಿಗೆ ಸಿಕ್ಕ ದೊಡ್ಡ ಬ್ರಾಂಡ್ ಎಂದರೆ ತಪ್ಪಿಲ್ಲ.
ಅದರ ನಂತರ ಯಜಮಾನ ಖ್ಯಾತಿಯ ರೆಹಮಾನ್ ಕಿಚ್ಚ ಸುದೀಪ್ ಅವರಿಗೊಂದು ಸಿನಿಮಾ ನಿರ್ಮಾಣ ಮಾಡುತ್ತಾರೆ ಅದುವೇ ಹುಚ್ಚ,ಅದು ಕೂಡ ಸೂಪರ್ ಡೂಪರ್ ಹಿಟ್.
ಕನ್ನಡ ಚಿತ್ರರಂಗದಲ್ಲಿ ಅನ್ನದಾತ ರಾಗಿ ನಿರ್ಮಾಪಕರ ಸ್ಥಾನದಲ್ಲಿ ಇದ್ದುಕೊಂಡು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಯಜಮಾನ ರೆಹಮಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ,ಅವರು ಸಿಹಿ ಸುದ್ದಿ ಕೊಟ್ಟಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು,ಹೌದು

ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅರಂಭವಾಯಿತು ಶಾನ್ – ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ
ರುಹಿನಾ ರೆಹಮಾನ್ ನಿರ್ಮಾಣದ ಈ ಚಿತ್ರಕ್ಕೆ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ
ಆರ್ ಆರ್ ಫಿಲಂಸ್ ಲಾಂಛನದಲ್ಲಿ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ, ಚಂದ್ರಶೇಖರ್ ಬಂಡಿಯಪ್ಪ ಅವರ ನಿರ್ದೇಶನದಲ್ಲಿ ಶಾನ್ ಹಾಗೂ ಸಾನ್ಯ ಅಯ್ಯರ್ ನಾಯಕ – ನಾಯಕಿಯಾಗಿ ನಟಿಸುತ್ತಿರುವ “ವಿಷ್ಣುವಲ್ಲಭ” ಚಿತ್ರದ ಮುಹೂರ್ತ ಸಮಾರಂಭ ಶ್ರೀಕೃಷ್ಣ ಜನ್ಮಾಷ್ಟಮಿ ಶುಭದಿನದಂದು ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸಚಿವರಾದ ಜಮೀರ್ ಅಹಮದ್ ಖಾನ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಕೆ.ಮಂಜು ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಿರ್ಮಾಪಕ ರೆಹಮಾನ್ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಿಷ್ಣುವರ್ಧನ್ ಅಭಿನಯದ “ಯಜಮಾನ”, ಸುದೀಪ್ ಅಭಿನಯದ “ಹುಚ್ಚ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ರೆಹಮಾನ್ ಅವರ ಪುತ್ರಿ ರುಹಿನಾ ರೆಹಮಾನ್. ಈ ಹಿಂದೆ ಗಣೇಶ್ ಅಭಿನಯದ “ಮದುವೆಮನೆ” ಚಿತ್ರವನ್ನು ನಿರ್ಮಿಸಿದ್ದ ರುಹಿನಾ ರೆಹಮಾನ್ ಅವರು ನಿರ್ಮಿಸುತ್ತಿರುವ ಎರಡನೇ ಚಿತ್ರವಿದು. ಇದೊಂದು ಪ್ರೇಮಕಥಾನಕವಾಗಿದ್ದು,ರುಹಿನಾ ಅವರೆ ಕಥೆ ಬರೆದಿದ್ದಾರೆ. ಕ್ರಿಯೇಟಿವ್ ಹೆಡ್ ಅಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. “ರಥಾವರ” ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿರುವ “ವಿಷ್ಣುವಲ್ಲಭ” ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.
ಶಾನ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು, ಇದು ಅವರಿಗೆ ಮೊದಲ ಚಿತ್ರ. ನಟನೆಗೆ ಬೇಕಾದ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. “ಪುಟ್ಟಗೌರಿ ಮದುವೆ” ಖ್ಯಾತಿಯ ಸಾನ್ಯ ಅಯ್ಯರ್ ಈ ಚಿತ್ರದ ನಾಯಕಿ. “ಕೆ.ಜಿ.ಎಫ್” ಅವಿನಾಶ್, ಸಂಪತ್, ಸಂಗೀತ, ಸ್ವಾತಿ, ಯಶ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂದಿನವಾರದಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಆನಂತರ ಶ್ರೀಲಂಕಾ ಮುಂತಾದ ಕಡೆ ಚಿತ್ರೀಕರಣವಾಗಲಿದೆ.

