ನಿಜಗುಣರ ನಂತರದ ಕಾಲದಿಂದ ಶಿಶುವಿನಾಳ ಶರೀಫರ ಕಾಲದವರೆಗೂ ಮುಪ್ಪಿನಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾ ಮಹಾಂತಸ್ವಾಮಿ, ಕಡಕೋಳದ ಮಡಿವಾಳೇಶ್ವರ ಮುಂತಾದವರ ಹಾಡುಗಳನ್ನು ತತ್ವಪದಗಳೆಂದೇ ಕರೆದಿದ್ದಾರೆ. ಅಲ್ಲದೇ ಕಡಕೋಳ ಮಡಿವಾಳಪ್ಪನವರು ತತ್ವಪದಕಾರರಾಗಿಯೇ ಅತ್ಯಂತ ನಿರ್ಬಿಡೆಯ ಬರಹಗಾರರಾಗಿದ್ದಾರೆ.
“ಬಾಯಲ್ಲಿ ಒಂದು ಆಡ್ತಿರಿ,
ಮನಸ್ಸಿನೊಳಗೊಂದು ಮಾಡ್ತಿರಿ
ಬರೆದಿಟ್ಟದ್ದು ಓದಿಕೊಂಡು
ಭ್ರಾಂತಿಗೆಟ್ಟು ಹೋಗುತ್ತೀರಿ “
ತಾತ್ವಿಕ ದೃಷ್ಟಿಯಿಂದಲೇ ಜೀವನದ ರಹಸ್ಯಗಳನ್ನು ಭೇದಿಸಲು ತತ್ವಪದಗಳು ಪ್ರೇರೇಪಿಸುತ್ತವೆ. ತತ್ವಪದಕಾರರ ಮಾರ್ಗ ಭಕ್ತಿಪಥವೂ, ದೈವಪಥವೂ, ಆಧ್ಯಾತ್ಮ ಪಥವೂ, ಹಾಗೂ ಸೀಮಿತ ಹಂಗನ್ನು ಮೀರಿದ ಬದುಕಿನ ಚಿಂತನಾ ಕ್ರಮವಾಗಿದೆ.
ತತ್ವಪದ, ತತ್ವಪದಕಾರರನ್ನು ಅರಿತುಕೊಳ್ಳುವುದೆಂದರೆ - ನಮ್ಮನ್ನು ನಾವು ಕಂಡುಕೊಳ್ಳುವ ಹುಡುಕಾಟ. ನಮ್ಮ ಅಸ್ಮಿತೆಗಳು ಕಳೆದು ಹೋಗಿವೆ. ಹೀಗಾಗಿ ತತ್ವಹೀನರಾಗಿ ಬಾಳುತ್ತಿರುವ ನಮ್ಮ ಬದುಕನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಮ್ಮ ಅಸ್ಮಿತೆಯ ಕಳೆದುಕೊಂಡ ನಾವು ನಮ್ಮಲ್ಲೇನಿದೆ ?ಎಂದು ಅರಿಯದೆ ಭಿಕ್ಷುಕರಾಗಿ ಬಿಟ್ಟಿದ್ದೇವೆ.
ತತ್ವಪದಕಾರ ಪರಂಪರೆಯು ಎಂದಿಗೂ ಜೀವಂತವಾಗಿರುವ ಪರಂಪರೆ. ಸಿದ್ದರು, ಅವಧೂತರು, ಶರಣರು, ಆರೂಢರು, ಅಚಲಿಗರು, ಗುರು ಮಕ್ಕಳು, ಗುರುಭಕ್ತಿ ತೆಗೆದುಕೊಂಡವರು, ಶಿವಯೋಗಿಗಳು, ಬಯಲು ಸಾಧಕರು, ಅದ್ವೈತ ಸಾಧಕರು, ಹೀಗೆ ಇವರಲ್ಲಿ ಅನೇಕ ಚಿಂತನ ಪ್ರಸ್ತಾನಗಳಿವೆ. ಇವರು ಎಲ್ಲ ಪಂಥದವರೊಂದಿಗೆ ಪ್ರೀತಿಯಿಂದ ಒಡನಾಡಿಗಳಾಗಿದ್ದಾರೆ.
ಹೆಸರಾಂತ ತತ್ವಪದಕಾರರು :
ಶಿಶುವಿನಾಳ ಶರೀಫ, ಕಡುಕೋಳದ ಮಡಿವಾಳಪ್ಪ , ಕನಕದಾಸರು, ಚಿದಾನಂದ ಅವಧೂತರು, ಕಲ್ಲೂರು ರುದ್ರಮುನಿದೇವ , ನೀರಲಕೇರಿ ಬಸವಲಿಂಗ ಶರಣರು, ಹಸನಸಾಬ, ಸಾವಳಗಿ ಮೊಹಮ್ಮದಸಾಬ, ಮಹಾಗಾಂವ ಮೀರಾಸಾಬ , ಸರ್ಪಭೂಷಣ ಶಿವಯೋಗಿಗಳು, ಗುರುಪೀರಾ ಖಾದ್ರಿ, ಕೊಡೆಕಲ್ ಬಸವಣ್ಣ , ಸಿಂದಗಿ ರಾಚಮ್ಮ , ರಾಯಚೂರಿನ ಹನುಮಂತವ್ವ , ಸೋಲಾಪುರದ ಜಯದೇವಿ ತಾಯಿ, ಬಸವಕಲ್ಯಾಣದ ಫೈಮೂದ ಫಾತಿಮಾ, ಧನ್ನೂರಿನ ತಾಯವ್ವ , ಕನ್ನಡ ಸಾಹಿತ್ಯದಲ್ಲಿ ದಾಖಲೆಗೊಂಡ , ಇತಿಹಾಸದಲ್ಲಿಯೇ ಅತ್ಯಂತ ವಿಸ್ತಾರವಾದ ಭಾಗವೆಂದರೆ ತತ್ವಪದಗಳೇ . ಈ ಪ್ರಮಾಣದ ಸಾಹಿತ್ಯವು ಸಾಹಿತ್ಯದ ಯಾವ ಪ್ರಕಾರದಲ್ಲೂ ಸೃಷ್ಟಿಯಾಗಿಲ್ಲ.
ಮುಂದುವರೆಯುತ್ತದೆ …..

